ಕಲಬುರಗಿ: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಕಲಬುರಗಿಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.
ಸೋನಾಬಾಯಿ ಧೂಳಪ್ಪಾ (60) ಹತ್ಯೆಯಾದ ದುರ್ದೈವಿ ಮಹಿಳೆಯಾಗಿದ್ದು, ಇವರು ಹುತಾತ್ಮ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಅವರ ಚಿಕ್ಕಮ್ಮ. ಘಟನೆಯಲ್ಲಿ ಅದೇ ಕುಟುಂಬದ ಮೂವರು ಮಕ್ಕಳು ಸೇರಿದಂತೆ ಐದು ಜನರಿಗೆ ಗಂಭೀರ ಗಾಯವಾಗಿದೆ.
ಜಾತ್ರಾ ಮಹೋತ್ಸವಕ್ಕೆಂದು ಖಜೂರಿ ಗ್ರಾಮಕ್ಕೆ ಕುಟುಂಬ ಆಗಮಿಸಿತ್ತು. ಈ ವೇಳೆ ಮನೆಯಲ್ಲಿ ಮಲಗಿದ್ದಾಗ ಐದು ಜನರ ತಂಡವೊಂದು ನೀರು ಕೇಳುವ ನೆಪದಲ್ಲಿ ಏಕಾಏಕಿ ಮನೆಗೆ ನುಗ್ಗಿ ಬಡಿಗೆಯಿಂದ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.