ತುಮಕೂರು: ಚುನಾವಣೆಗೆ ಇನ್ನೂ ಕೆಲವು ತಿಂಗಳು ಬಾಕಿ ಇರುವಂತೆಯೇ ಜನಪ್ರತಿನಿಧಿಗಳ ನಾಲಿಗೆ ಯದ್ವಾತದ್ವಾ ತಿರುಗುತ್ತಿದೆ. ಆಚಾರವಿಲ್ಲದ ನಾಲಿಗೆಯಲ್ಲಿ ಮನಸಿಗೆ ಬಂದಂತೆ ತುಚ್ಛವಾಗಿ, ಕೀಳುಮಟ್ಟದ ಭಾಷಣ ಆರಂಭವಾಗಿದೆ. ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ. ಜೆಡಿಎಸ್ ನ ಅತೃಪ್ತ ಸ್ಥಳೀಯ ಮುಖಂಡ ಶಿವಣ್ಣರನ್ನು ಟೀಕಿಸುವ ಭರದಲ್ಲಿ ಸಭ್ಯತೆಯ ಎಲ್ಲೆ ಮೀರಿ ಮಾತನಾಡಿದ್ದಾರೆ. ‘ನಾನೂ ಗಂಡಸು…, ನನಗೂ ಇಬ್ಬರು ಮಕ್ಕಳಿದ್ದಾರೆ. ಬೇಕಾದ್ರೆ ನಾನು ಆ ಶಿವಣ್ಣನ ಮನೆಗೆ ಬಂದು ನನ್ನ ಗಂಡಸ್ತನ ಸಾಬೀತುಪಡಿಸ್ತೀನಿ’ ಎಂದು ಅಸಭ್ಯವಾಗಿ ಹೊಸಕೆರೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ್ದಾರೆ. ಶಾಸಕರ ಅಸಂವಿಧಾನಿಕ ಪದಪ್ರಯೋಗಗಳ ಭಾಷಣದ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶ್ರೀನಿವಾಸ್ ಭಾಷಣದಲ್ಲೇನಿದೆ..?: ‘ಅವನ್ಯಾವನೋ ಶಿವಣ್ಣನಂತೆ, ಅವನು ಸೀದಾ ಅವನ ಅಪ್ಪನಿಗೆ ಹುಟ್ಟಿದರೆ ನನ್ನ ಮುಂದೆ ಬಂದು ಮಾತನಾಡಬೇಕು. ನಾನು ಗಂಡಸಾ ಹೆಂಗಸಾ ಅಂತಾ ಅವನು ಕೇಳಲಿ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಶಾಸಕನಾಗಿದ್ದೀನಿ ಇದರಲ್ಲಿ ನಾನು ಗಂಡ್ಸು ಅಂತಾ ನಿರೂಪಿಸಿದ್ದೀನಿ. ನನಗೆ ಎರಡು ಮಕ್ಕಳಿವೆ. ಇವರ ಮುಂದೇನೇ ತಿರುಗಾಡ್ತಾನೆ ನನ್ ಮಗಾ. ಅವನಿಗೆ ಈಗ 21 ವರ್ಷ. ನಾನು ಗಂಡಸು ಅಂತಾ ನೀವು ಒಪ್ಕೋತೀರಾ. ಅದ್ರ ಮೇಲೂ ಅವರಿಗೆ ಅನುಮಾನ ಇದೆ ಅಂದ್ರೆ ಬೇಕಾದ್ರೆ ನಾನು ಅವರ ಮನೆಗೆ ಬರ್ತೀನಿ. ಗಂಡಸಾ ಹೆಂಗಸಾ ಅಂತಾ ತೋರಿಸಲಿ’ ಎಂದು ಹರಿಹಾಯ್ದಿದ್ದಾರೆ ಶ್ರೀನಿವಾಸ್. ಇದಕ್ಕೆಲ್ಲಾ ಶ್ರೀನಿವಾಸ್ ಬೆಂಬಲಿಗರು ಚಪ್ಪಾಳೆ, ತಟ್ಟಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.
ಇಷ್ಟೆಲ್ಲಾ ಹೇಳಬಾರದ್ದನ್ನು ಹೇಳಿದ ಮೇಲೆ, ‘ಮಾತಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ಮಾತನಾಡಬೇಕು. ಇನ್ನೊಬ್ಬ ವ್ಯಕ್ತಿಯ ಅವಹೇಳನ ಮಾಡುವಂಥಾ ಕೆಲಸ ಮಾಡಬಾರದು. ಆ ಶಿವಣ್ಣ ಅನ್ನೋ ಬಡ್ಡೀಮಗ ಅವನ ಅಪ್ಪನಿಗೇ ಹುಟ್ಟಿದರೆ ನನ್ಮುಂದೆ ಬಂದು ನಿಂತು ಮಾತನಾಡಲಿ. ನಾನು ಮಾಡಬೇಕಾದ ಕೆಲಸವನ್ನು ಕಾಯಾ ವಾಚಾ ಮನಸಾ ಮಾಡ್ತೀನಿ ಎಂದು ಹೇಳಿದ್ದಾರೆ.
ಜನರು ಏನ್ ಹೇಳ್ತಿದ್ದಾರೆ: ಶಿವಣ್ಣ ಜೆಡಿಎಸ್ ಅತೃಪ್ತ ನಾಯಕ. ಅವರು ಬಿಜೆಪಿಗೆ ಒಳಗಿಂದೊಳಗೇ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪ ಶ್ರೀನಿವಾಸ್ ಅವರದ್ದು. ಶಿವಣ್ಣ ಲಿಂಗಾಯತ ಸಮುದಾಯದ ಮುಖಂಡ. ನಿಜವಾಗಿಯೂ ಶ್ರೀನಿವಾಸ್ ಅವರಿಗೆ ತಾನು ಯಾರ ಬಗ್ಗೆ ಮಾತನಾಡುತ್ತಿದ್ದರೋ ಅವರ ಹೆಸರೇ ಗೊತ್ತಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಶಾಸಕ ಶ್ರೀನಿವಾಸ್ ಅವರು ಸಿಟ್ಟಾಗಿರೋರ ನಿಜವಾದ ಹೆಸರು ಸೊಣಬನಹಳ್ಳಿ ರಾಜಣ್ಣ ಅಂತೆ. ಆದರೆ ಮಾತಿನ ಭರದಲ್ಲಿ ಅವರ ಬಾಯಿಯಿಂದ ಶಿವಣ್ಣ ಎಂದು ಹೆಸರು ಬಂದಿದೆ ಎನ್ನುವುದು ಸ್ಥಳೀಯರ ವಾದ.
ಇದನ್ನೆಲ್ಲಾ ಕೇಳಿಸಿಕೊಂಡ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪಕ್ಷದ ನಾಯಕರು ಈ ಬಗ್ಗೆ ಏನನ್ನುತ್ತಾರೋ ಎಂಬ ಕುತೂಹಲ ಎಲ್ಲರದು.
https://www.youtube.com/watch?v=qyvMXDy82ow